ಮಹಿಳೆಯರನ್ನು ವೇಶ್ಯಾವಾಟಿಕೆಗೆ ತಳ್ಳಿದ ಆರೋಪ ಹೊತ್ತಿರುವ ಓರ್ವ ಮಹಿಳಾ ವಿರೋಧಿ, ಸಂಘ ಪರಿವಾರದ ಕಾರ್ಯಕರ್ತನಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿಯವರು ಆತನ ಕೈ ಹಿಡಿದು ಆತ್ಮೀಯವಾಗಿ ಹರಸಿ ಆಶೀರ್ವದಿಸಿರುವುದು ಆಘಾತಕಾರಿ ಬೆಳವಣಿಗೆ ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ಆರೋಪಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ವಿಮ್ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ, ಸಮಾಜಘಾತುಕ ಕ್ರತ್ಯಗಳಿಂದಲೇ ಸದಾ ಸುದ್ದಿಯಲ್ಲಿರುವ ಅಪ್ಪಟ ಕೋಮುವಾದಿ, ನೂರಾರು ಕ್ರಿಮಿನಲ್ ಕೇಸ್ ಗಳನ್ನು ಹೊತ್ತುಕೊಂಡಿರುವ ಪುನೀತ್ ಕೆರೆಹಳ್ಳಿ ಜೊತೆ ನಾಗಲಕ್ಷ್ಮಿಯವರು ಈ ರೀತಿ ಆತ್ಮೀಯವಾಗಿ ನಡೆದುಕೊಂಡ ರೀತಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ಥಾನಕ್ಕೆ ಶೋಭೆ ತರುವಂತದ್ದಲ್ಲ. ಮಾತ್ರವಲ್ಲ ಇದು ಸಮಾಜಕ್ಕೆ ಕೆಟ್ಟ ಸಂದೇಶವನ್ನು ರವಾನಿಸಿದಂತಾಗಿದೆ ಎಂದು ಆರೋಪಿಸಿದರು.
ಕಾನೂನು ಉಲ್ಲಂಘನೆ ಮತ್ತು ಅಪರಾಧ ಪ್ರಕರಣಗಳಲ್ಲಿ ಕುಖ್ಯಾತಿ ಪಡೆದಿರುವ ವ್ಯಕ್ತಿಗೆ ಸಾರ್ವಜನಿಕವಾಗಿ ಗೌರವ ನೀಡುವುದು ನ್ಯಾಯ ವ್ಯವಸ್ಥೆಯ ಮೇಲಿನ ಜನರ ನಂಬಿಕೆಗೆ ಧಕ್ಕೆ ಉಂಟುಮಾಡುತ್ತದೆ. ಸಾರ್ವಜನಿಕ ಹುದ್ದೆಯಲ್ಲಿರುವವರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಅವರು ಹೇಳಿದರು. ನಿನ್ನ ಸೇವೆ ಹೀಗೆ ಮುಂದುವರಿಯಲಿ ಎಂದು ಹಾರೈಸಿರುವ ನಾಗಲಕ್ಷ್ಮಿಯವರು ಪುನೀತ್ ಕೆರೆಹಳ್ಳಿಯ ಯಾವ ಸೇವೆಗಳು ತಮಗೆ ಆತನ ಮೇಲೆ ಅಭಿಮಾನ ಮೂಡಿಸಿದೆ ಎಂದು ಸ್ಪಷ್ಟಪಡಿಸಬೇಕು ಹಾಗೂ ಸರ್ಕಾರವು ಇದರ ಬಗ್ಗೆ ಮಧ್ಯೆ ಪ್ರವೇಶಿಸಬೇಕೆಂದು ಆಗ್ರಹಿಸಿದರು.



